ಬಿಜೆಪಿ ಸಚಿವರ ಮುಖಕ್ಕೆ ವೋಟ್ ಬರಲ್ಲಾಂತ ಮೋದಿಗೆ ಕರ್ಕೊಂಡು ಬರ್ತಾರೆ: ಸಿದ್ದರಾಮಯ್ಯ | JANATA NEWS
ಕಲಬುರಗಿ : ಬಿಜೆಪಿ ಸಚಿವರು ಅಲಿ ಬಾಬ 40 ಚೋರರಿದ್ದಂತೆ. ಇವರ ಮುಖಕ್ಕೆ ಓಟ ಬರಲ್ಲ ಅಂತ ಮೋದಿ, ಅಮಿತ್ ಶಾ, ಜೆ.ಪಿ.ನಡ್ಡಾ ಅವರನ್ನು ರಾಜ್ಯಕ್ಕೆ ಕರೆದುಕೊಂಡು ಬರುತ್ತಿದ್ದಾರೆ.
ಯಾದಗಿರಿಯಲ್ಲಿ ಇಂದು ಆಯೋಜಿಸಿದ ಪ್ರಜಾ ಧ್ವನಿ ಯಾತ್ರೆಯಲ್ಲಿ ಪಾಲ್ಗೊಳ್ಳಲು ಅಲ್ಲಿಗೆ ತೆರಳವ ಮೊದಲು ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿ, ಈ ಸಲ ಏನೇ ಪ್ರಯತ್ನ ಮಾಡಿದರೂ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ. ಬಿಜೆಪಿ ಸರ್ಕಾರದಿಂದ ರಾಜ್ಯದಲ್ಲಿ ಭ್ರಷ್ಟಾಚಾರ, ದುರಾಡಳಿತ ಮುಗಿಲು ಮುಟ್ಟಿದೆ.
ಬಿಜೆಪಿಯವರಿಗೆ ಈ ಸಲ ಚುನಾವಣೆಯಲ್ಲಿ ಸೋಲುವ ಭಯ ಹೊಕ್ಕಿದೆ. ಅದಕ್ಕಾಗಿಯೇ ವಾರಕ್ಕೊಮ್ಮೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ , ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ರಾಜ್ಯಕ್ಕೆ ಕರೆಸುತ್ತಿದ್ದಾರೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಲೇವಡಿ ಮಾಡಿ ತಿರುಗೇಟು ನೀಡಿದರು.
ಉತ್ತರ ಕರ್ನಾಟಕ ಭಾಗದ 112 ಕ್ಷೇತ್ರದಲ್ಲಿ ಪ್ರವಾಸ ಮಾಡುತ್ತೇನೆ. ಫೆ.3ರಿಂದ ಬಸವಕಲ್ಯಾಣದಿಂದ ಪ್ರತಿ ಕ್ಷೇತ್ರದಲ್ಲೂ ಯಾತ್ರೆ ಮಾಡುತ್ತೇವೆ. ಮೈಸೂರು ಭಾಗದಲ್ಲಿ ಡಿ.ಕೆ.ಶಿವಕುಮಾರ್ ಯಾತ್ರೆ ಮಾಡಲಿದ್ದಾರೆ. ಯಾತ್ರೆ ಮಾಡಿ ಜನರಿಗೆ ಬಿಜೆಪಿ ಸರ್ಕಾರದ ಕರ್ಮಕಾಂಡ ತಿಳಿಸುತ್ತೇವೆ. ನಮ್ಮ ಪಕ್ಷದಿಂದ ಬಿಜೆಪಿ ವಿರುದ್ಧದ ಚಾರ್ಜ್ ಶೀಟ್ ಜನರ ಮುಂದೆ ಇಡುತ್ತಿದ್ದೇವೆ. ಪಾಪದ ಪುರಾಣ ಅಂತ ಚಾರ್ಜ್ ಶೀಟ್ಗೆ ಹೆಸರು ಇಡುತ್ತಿದ್ದೇವೆ. ಇದನ್ನು ಜನರಿಗೆ ತಲುಪಿಸುವ ಕೆಲಸ ಮಾಡುತ್ತೇವೆ ಎಂದರು.